ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆ ವಿಕ್ರಮ್ ಆರ್ಯ ಹಾಗೂ ಕಾಮಿಡಿ ಕಿಂಗ್ ಚಿಕ್ಕಣ್ಣ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರ ತಲೆಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ ಕಳೆದ ವಾರವಷ್ಟೇ ಈ ಚಿತ್ರವೂ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಅದ್ದೂರಿ ಪ್ರಚಾರದೊಂದಿಗೆ ಬಿಡುಗಡೆಯಾದ ಈ ಚಿತ್ರವು ನಿರೀಕ್ಷಿದಂತೆ ಕನ್ನಡಿಗರ ಮನವನ್ನು ಗೆದ್ದಿದೆ. ಚಿತ್ರದ ನಾಯಕಿಯರಾದ ನಿಖಿತಾ ಹಾಗೂ ಅಮಾನ್ ಗ್ರೇವಾಲ್ರವರ ಅಭಿನಯವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ನಡೆಯುವಂತಹ ಹಲವಾರು ಘಟನೆಗಳನ್ನು ಈ ಚಿತ್ರ ಕಥೆಯಲ್ಲಿ ಅಳವಡಿಸಿಕೊಂಡಿರುವ ನಿರ್ದೇಶಕ ವೇಣುಗೋಪಾಲ್ರವರು ಈಗೀನ ಯುವಕರು ಹೇಗೆಲ್ಲಾ ಮೋಸಹೋಗುತ್ತಾರೆ ಎಂಬುದನ್ನು ಇಬ್ಬರು ಅಮಾಯಕ ಯುವಕರ ಮೂಲಕ ತೋರಿಸಲಿದ್ದಾರೆ. ನಮ್ಮ ಚಿತ್ರವನ್ನು ವೀಕ್ಷಕರು ಇಷ್ಟಪಟ್ಟು ಖುಷಿ ಪಡುತ್ತಿದ್ದಾರೆ. ಮೊದಲವಾರ ಎಲ್ಲಾ ಕಡೆ ಉತ್ತಮ ಷೇರು ಬಂದಿದ್ದು ಎರಡನೇ ವಾರ ೧೫ ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೊಸ ಚಿತ್ರಗಳು ಬಂದ ಕಾರಣದಿಂದ ಕೆಲ ಚಿತ್ರಮಂದಿರಗಳಲ್ಲಿ ಅನಿವಾರ್ಯವಾಗಿ ತೆಗೆದರು ಚಿತ್ರದ ಕಲೆಕ್ಷನ್ ಕಡಿಮೆಯಾಗಿಲ್ಲ ಎಂದು ಕಳೆದವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ನಟ ನಿರ್ಮಾಪಕ ವಿಕ್ರಮ್ ಆರ್ಯ ಹೇಳಿಕೊಂಡರು.
ಈವರೆಗೂ ಕೇವಲ ಹಾಸ್ಯ ಪಾತ್ರಗಳಿಂದಲೇ ನೋಡುಗರನ್ನು ರಂಜಿಸುತ್ತಿದ್ದ ಚಿಕ್ಕಣ್ಣನವರು ಸೆಂಟಿಮೆಂಟ್ ಟಚ್ಚಿರುವ ಪಾತ್ರವನ್ನು ಕೂಡ ನಿಭಾಯಿಸಬಲ್ಲೇ ಎಂದು ನಿರೂಪಿಸಿದ್ದಾರೆ. ಪ್ರೇಕ್ಷಕರು ನನ್ನನ್ನು ಯಾವ ರೀತಿ ಇಷ್ಟ ಪಡುತ್ತಾರೋ ಅದೇ ರೀತಿ ನಾನು ಅವರನ್ನು ರಂಜಿಸಲು ಸಿದ್ದ. ಕಲಾವಿದರಿಗೆ ಇಂತಹದ್ದೇ ಪಾತ್ರ ಬೇಕು ಎಂಬುದಿಲ್ಲ ಎಂದು ಅವರು ಹೇಳಿಕೊಂಡರು, ಚಿತ್ರದಲ್ಲಿ ನಿರ್ದೇಶಕನ ಪಾತ್ರ ಮಾಡಿದ ಬುಲೆಟ್ ಪ್ರಕಾಶ್ರವರು ಮಾತಾನಾಡುತ್ತಾ ಇಂತಹ ಒಳ್ಳೆಯ ನಿರ್ಮಾಪಕರು ಕನ್ನಡ ಚಿತ್ರರಂಗದಲ್ಲಿ ಉಳಿಯಬೇಕು ತುಂಬಾ ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ. ಇಡೀ ಕುಟುಂಬದವರು ಕುಳಿತು ನೋಡುವಂತಹ ಸಿನಿಮಾ ಎಂದು ಹೇಳಿಕೊಂಡರು.